ದೇಶ
ಕಾಂಗ್ರೆಸ್-ಆರ್ಎಸ್ಎಸ್ ವಿವಾದದ ನಡುವೆ ಮೋಹನ್ ಭಾಗವತ್ ಕರ್ನಾಟಕ ಪ್ರವಾಸ
ಬೆಳಗಾವಿ, ಜು. 3: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಜುಲೈ 6ರಂದು ಬೆಳಗಾವಿಗೆ ಆಗಮಿಸಲಿದ್ದು, ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆರ್ಎಸ್ಎಸ್ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜುಲೈ 6ರಿಂದ ವಿವಿಧ ಹಂತಗಳ ಸ್ವಯಂಸೇವಕರ ಸಭೆಗಳು ಆರಂಭವಾಗಲಿದ್ದು, ಜುಲೈ 10ರಿಂದ 12ರವರೆಗೆ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ನಡೆಯಲಿದೆ.
ಸಭೆಯಲ್ಲಿ ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳಿಂದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಇದರೊಂದಿಗೆ ಸಂಘ ಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಕೂಡ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಭೆಯಲ್ಲಿ ಶಾಖಾ ಕಾರ್ಯಗಳ ವಿಸ್ತರಣೆ, ಸಂಘದ ಶತಾಬ್ದಿ ವರ್ಷದ ಕಾರ್ಯಕ್ರಮಗಳ ಪ್ರಗತಿ, 2026ರ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಜೊತೆಗೆ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವುದು, ವಿಜಯದಶಮಿವರೆಗೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಗಳು ಹಾಗೂ 2026–27ರ ಪ್ರವಾಸ ಯೋಜನೆಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಸಭೆಯಲ್ಲಿ ದೇಶದ ಸಮಕಾಲೀನ ಬೆಳವಣಿಗೆಗಳು, ಜನಗಣತಿ, ರಾಷ್ಟ್ರೀಯ ಪರಿಸ್ಥಿತಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಪ್ರಚಾರಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಸರಸಂಘಚಾಲಕ ಮೋಹನ್ ಭಾಗವತ್ ಅವರೊಂದಿಗೆ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಡಾ. ಕೃಷ್ಣಗೋಪಾಲ್, ಸಿ.ಆರ್. ಮುಕುಂದ, ಅರುಣ್ ಕುಮಾರ್ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಹಾಗೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ.
ದೇಶ
‘ನಾನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಿಲ್ಲ’ – ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ
ಬೆಂಗಳೂರು, ಜು. 3: ಬಿಡದಿ ಟೌನ್ಶಿಪ್ ಯೋಜನೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹಾಗೂ ರಾಮನಗರ ಕಲ್ಲು ಕ್ವಾರಿ ದುರಂತದ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಮತ್ತು ಕನಕಪುರ ಅಭಿವೃದ್ಧಿ ಕುರಿತು ಸಿಎಂ ನೀಡಿರುವ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ರಾಮನಗರ ನಿಯೋಗವು ₹770 ಕೋಟಿ ಅಭಿವೃದ್ಧಿ ಅನುದಾನ ಕುರಿತು ಚರ್ಚಿಸಲು ಬಂದಿತ್ತು. ಆದರೆ, ಸಿಎಂ ಬಿಡದಿ ಟೌನ್ಶಿಪ್ ಬಗ್ಗೆ ಭಾಷಣ ಮಾಡಿದ್ದು ಆಶ್ಚರ್ಯಕರ ಎಂದು ಕುಮಾರಸ್ವಾಮಿ ಹೇಳಿದರು. “ಅವರು ನಾಲ್ಕು ತಾಲೂಕುಗಳ ಮುಖ್ಯಮಂತ್ರಿಯಾ ಅಥವಾ ಇಡೀ ಕರ್ನಾಟಕದ ಮುಖ್ಯಮಂತ್ರಿಯಾ?” ಎಂದು ಪ್ರಶ್ನಿಸಿದರು.
ರಾಮನಗರ ಹಾಗೂ ಕನಕಪುರದ ಅಭಿವೃದ್ಧಿಯ ಇತಿಹಾಸವನ್ನು ಉಲ್ಲೇಖಿಸಿದ ಅವರು, “ನಾನು ರಾಜಕೀಯ ಪ್ರವೇಶಿಸಿದಾಗ ಆ ಭಾಗದಲ್ಲಿ ಸರಿಯಾದ ರಸ್ತೆಗಳಿರಲಿಲ್ಲ, ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆ ಇತ್ತು. ಕನಕಪುರದ ಜನರ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮಾಡಿದ್ದೇನೆ. ನಾನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಿಲ್ಲ” ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮಾತನಾಡಿದ ಅವರು, ತಾವು ಅಧಿಕಾರದಲ್ಲಿದ್ದಾಗಲೇ ಈ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದ್ದೆ. ನಂತರ ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಕಾರಂತ ಬಡಾವಣೆ ಯೋಜನೆಗಳನ್ನು ಘೋಷಿಸಲಾಗಿತ್ತು ಎಂದು ಹೇಳಿದರು. ಅರ್ಕಾವತಿ ಬಡಾವಣೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರದಲ್ಲಿಯೂ ಸರ್ಕಾರವನ್ನು ಟೀಕಿಸಿದ ಕುಮಾರಸ್ವಾಮಿ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಮನೆಮನೆಗೆ ಜಾತಿ ಮತ್ತು ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಇದು 2028ರ ಚುನಾವಣೆಯ ರಾಜಕೀಯ ತಂತ್ರದ ಭಾಗವಾಗಿರಬಹುದು ಎಂದು ಅವರು ಹೇಳಿದರು.
ಇದೇ ವೇಳೆ, ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಕಲ್ಲು ಕ್ವಾರಿ ದುರಂತ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ಗಣಿಗಾರಿಕೆ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣವಾಗಿದೆ. ಸರ್ಕಾರ ಪ್ರಕರಣದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅಪರಾಧ
ಬೆಂಗಳೂರು ಕಲ್ಲು ಕ್ವಾರಿ ದುರಂತ: ‘ಕ್ವಾರಿ ಮಾಲೀಕನನ್ನು ತಕ್ಷಣ ಬಂಧಿಸಿ, ₹1 ಕೋಟಿ ಪರಿಹಾರ ನೀಡಲಿ’ – ಶಾಸಕ ಎಸ್.ಟಿ. ಸೋಮಶೇಖರ್ ಆಗ್ರಹ
ಬೆಂಗಳೂರು/ರಾಮನಗರ, ಜು. 3: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಬಳಿ ಸಂಭವಿಸಿದ ಭೀಕರ ಕಲ್ಲು ಕ್ವಾರಿ ದುರಂತಕ್ಕೆ ಸಂಬಂಧಿಸಿದಂತೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (ST Somashekar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ವಾರಿ ಮಾಲೀಕನನ್ನು ತಕ್ಷಣವೇ ಬಂಧಿಸಿ ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ಬಗ್ಗೆ ತಾವು ಈ ಹಿಂದೆಯೇ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದಾಗಿ ಹೇಳಿದರು. ಕಾನೂನುಬದ್ಧವಾಗಿ ಮಾತ್ರ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸುವಂತೆ ಕ್ವಾರಿ ಮಾಲೀಕರ ಸಭೆ ಕರೆದು ಎಚ್ಚರಿಕೆ ನೀಡಲಾಗಿತ್ತು. ಗರ್ಭಿಣಿ ಚಿರತೆ ಸಾವನ್ನಪ್ಪಿದ ಸಂದರ್ಭದಲ್ಲಿಯೂ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದೆ ಎಂದು ಅವರು ನೆನಪಿಸಿದರು.
ದುರಂತ ಬೆಳಗ್ಗೆ ಸುಮಾರು 7 ಗಂಟೆ ವೇಳೆಗೆ ಸಂಭವಿಸಿದ್ದು, 10 ಕಾರ್ಮಿಕರ ಪೈಕಿ 8 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ಸೋಮಶೇಖರ್ ಹೇಳಿದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕ್ವಾರಿ ಸಂಪೂರ್ಣ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ತಾವು ಹಿಂದೆ ವಿಧಾನಸಭೆಯಲ್ಲೂ ಹಾಗೂ ಪಿಟಿಷನ್ ಸಮಿತಿ ಸಭೆಯಲ್ಲೂ ಪ್ರಶ್ನೆ ಎತ್ತಿದ್ದೆ ಎಂದು ಹೇಳಿದರು. ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ವೈಫಲ್ಯ ಎಂದು ಆರೋಪಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲವು ಅಧಿಕಾರಿಗಳ ಪಾತ್ರದ ಬಗ್ಗೆಯೂ ಗಂಭೀರ ಅನುಮಾನ ವ್ಯಕ್ತಪಡಿಸಿದ ಅವರು, ಕ್ವಾರಿ ಮಾಲೀಕ ಮಾತ್ರವಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೂ ತಂದು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ತಿಳಿಸಿದ ಸೋಮಶೇಖರ್, ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ದೊರೆಯಬೇಕು ಹಾಗೂ ಕ್ವಾರಿ ಮಾಲೀಕನಿಂದಲೇ ₹1 ಕೋಟಿ ಪರಿಹಾರ ನೀಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ದೇಶ
ಪ್ರಧಾನಿ, ಸಚಿವರ ಅಧಿಕಾರಕ್ಕೆ ಹೊಸ ನಿಯಮ? ಸಂಸತ್ತಿಗೆ ಬರಲಿದೆ ಮಹತ್ವದ ಮಸೂದೆ
ನವದೆಹಲಿ, ಜು. 3: ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ವಜಾಗೊಳಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ಈ ಪ್ರಸ್ತಾವನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹೊಸ ವಿವಾದಕ್ಕೆ ವೇದಿಕೆ ಸಿದ್ಧವಾಗಿದೆ.
ಈ ಮಸೂದೆಯಡಿ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಗಂಭೀರ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾಗಿ 30 ದಿನಗಳ ಕಾಲ ನಿರಂತರವಾಗಿ ಜೈಲಿನಲ್ಲಿದ್ದರೆ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಸಂಬಂಧಿತ ಜನಪ್ರತಿನಿಧಿಯನ್ನು ಅಧಿಕಾರದಿಂದ ವಜಾಗೊಳಿಸುವ ಅಧಿಕಾರ ಹೊಂದಲಿದ್ದಾರೆ ಎಂದು ಪ್ರಸ್ತಾವಿಸಲಾಗಿದೆ.
ಈ ಸಂಬಂಧ ಸಂವಿಧಾನದ 75, 164 ಮತ್ತು 239ಎಎ ವಿಧಿಗಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಮಸೂದೆಯನ್ನು ಪ್ರಸ್ತುತ ಜಂಟಿ ಸಂಸದೀಯ ಸಮಿತಿ (JPC) ಪರಿಶೀಲಿಸುತ್ತಿದ್ದು, ಜುಲೈ 17ರಂದು ತನ್ನ ವರದಿಯನ್ನು ಅಂಗೀಕರಿಸುವ ನಿರೀಕ್ಷೆಯಿದೆ. ಬಳಿಕ ಸಂಸತ್ತಿನಲ್ಲಿ ಚರ್ಚೆ ನಡೆಸಿ ಅಗತ್ಯ ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಬೇಕಿದೆ.
ಆದರೆ ಈ ಪ್ರಸ್ತಾವನೆಗೆ ಈಗಾಗಲೇ ಹಲವು ರಾಜಕೀಯ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ. ರಾಜಕೀಯ ದ್ವೇಷ ಸಾಧಿಸಲು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ಅಪಾಯವಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ದುರುಪಯೋಗವನ್ನು ತಡೆಯಲು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಜೆಪಿಸಿ ಶಿಫಾರಸು ಮಾಡಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.
ಗಮನಾರ್ಹವಾಗಿ, ಇದೇ ಮಸೂದೆಯನ್ನು ಕಳೆದ ವರ್ಷದ ಆಗಸ್ಟ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಂಡಿಸಿದ್ದರು. ಆಗ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಮಸೂದೆ ಮುಂದಕ್ಕೆ ಸಾಗಿರಲಿಲ್ಲ. ಇದೀಗ ಪರಿಷ್ಕೃತ ರೂಪದಲ್ಲಿ ಮತ್ತೆ ಮಂಡಿಸಲು ಸರ್ಕಾರ ಮುಂದಾಗಿರುವುದರಿಂದ, ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗೆ ಯಾವ ರೀತಿಯ ಬೆಂಬಲ ಅಥವಾ ವಿರೋಧ ವ್ಯಕ್ತವಾಗಲಿದೆ ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
-
ದೇಶ19 hours agoಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಶೀಘ್ರ? ಡಿಕೆ ಶಿವಕುಮಾರ್ ನೀಡಿದ ಮಹತ್ವದ ಸುಳಿವು
-
ದೇಶ23 hours ago‘ದೇವಸ್ಥಾನಗಳ ಮುಂದೆ ಈಗ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕು’ – ಹರಿಪ್ರಸಾದ್ ವ್ಯಂಗ್ಯ
-
ಬೆಂಗಳೂರು19 hours agoಆಯೋಗದ ನೋಟಿಸ್ಗೂ ಕ್ಯಾರೆ ಇಲ್ಲ! ಬೆಂಗಳೂರು ಉತ್ತರ ಎಸಿಗೆ ಭಾರೀ ದಂಡ
-
ದೇಶ23 hours ago‘ರಾಜಕೀಯ ಟೀಕೆ ಇರಲಿ, ಕುಟುಂಬದ ಬಗ್ಗೆ ಮಾತನಾಡಬೇಡಿ’; ಪ್ರದೀಪ್ ಈಶ್ವರ್ ಪ್ರಕರಣಕ್ಕೆ ಮಧು ಬಂಗಾರಪ್ಪ ಹೇಳಿಕೆ
-
ಕ್ರೀಡೆ23 hours agoಎಸ್. ಶ್ರೀಶಾಂತ್ ಮೇಲಿನ 3 ವರ್ಷದ ನಿಷೇಧ ವಾಪಸ್: ಕ್ಷಮೆಯಾಚನೆ ಬಳಿಕ ಕೇರಳ ಕ್ರಿಕೆಟ್ ಅಸೋಸಿಯೇಶನ್ ಮಹತ್ವದ ನಿರ್ಧಾರ
-
ಅಪರಾಧ23 hours agoಸಂಸದೆ ಆಲಿಯಾ ನಾಸಿಫ್ ಬಂಧನ; ಮನೆಯಲ್ಲಿ ₹146 ಕೋಟಿ ನಗದು ಪತ್ತೆ
-
ಅಪರಾಧ6 hours agoಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅವಘಡ; ಅಕ್ರಮ ಕ್ವಾರೆಯಲ್ಲಿ 7 ಕಾರ್ಮಿಕರು ಬಲಿ
-
ದೇಶ19 hours agoಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಎಸ್.ಟಿ. ಸೋಮಶೇಖರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
