Connect with us

ದೇಶ

ದೇಶದಲ್ಲಿ ಇಂದಿನಿಂದ ಹೊಸ ಅಪರಾಧ ಕಾನೂನುಗಳು ಜಾರಿಗೆ; ಏನೆಲ್ಲ ಬದಲಾವಣೆ ಗೊತ್ತಾ? – NEW CRIMINAL LAWS

Published

on

ನವದೆಹಲಿ: ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಸೋಮವಾರ (ಜುಲೈ 1)ದಿಂದ ಜಾರಿಗೆ ಬರಲಿವೆ. ಈ ಕಾನೂನುಗಳು ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರಲಿದ್ದು, ವಸಾಹತುಶಾಹಿ ಯುಗದ ಕಾನೂನುಗಳಿಗೆ ಇತಿಶ್ರೀ ಹಾಡಲಿವೆ.

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಂಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಗೆ ಮುನ್ನುಡಿ ಬರೆಯಲಿವೆ.

ಶೂನ್ಯ ಎಫ್‌ಐಆರ್, ಪೊಲೀಸ್ ದೂರುಗಳ ಆನ್‌ಲೈನ್ ನೋಂದಣಿ, ಎಸ್‌ಎಂಎಸ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮನ್ಸ್ ಮತ್ತು ಎಲ್ಲ ಘೋರ ಅಪರಾಧಗಳಿಗೆ ಅಪರಾಧದ ದೃಶ್ಯಗಳ ಕಡ್ಡಾಯ ವಿಡಿಯೋಗ್ರಫಿಯಂತಹ ನಿಬಂಧನೆಗಳನ್ನು ಒಳಗೊಂಡಿವೆ. ಪ್ರಸ್ತುತ ಕೆಲವು ಸಾಮಾಜಿಕ ವಾಸ್ತವತೆಗಳು ಮತ್ತು ಅಪರಾಧಗಳನ್ನು ಪರಿಹರಿಸಲು ಈ ಕಾನೂನುಗಳು ಪ್ರಯತ್ನಿಸಲಿವೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಯವಿಧಾನವನ್ನು ಒದಗಿಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

45 ದಿನಗಳಲ್ಲಿ ತೀರ್ಪು: ಹೊಸ ಕಾನೂನುಗಳ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳಲ್ಲಿ ತೀರ್ಪು ಬರಬೇಕು. ಮೊದಲ ವಿಚಾರಣೆಯ 60 ದಿನಗಳಲ್ಲಿ ಆರೋಪಪಟ್ಟಿ ರಚಿಸಬೇಕು. ಅತ್ಯಾಚಾರ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ದಾಖಲಿಸಿಕೊಳ್ಳಬೇಕು ಮತ್ತು ವೈದ್ಯಕೀಯ ವರದಿಗಳು ಏಳು ದಿನಗಳಲ್ಲಿ ಬರಬೇಕು.

ದೇಶದ್ರೋಹವಲ್ಲ, ದೇಶವಿರೋಧಿ: ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯ ಕೃತ್ಯಗಳನ್ನು ವ್ಯಾಖ್ಯಾನಿಸಲಾಗಿದೆ. ದೇಶದ್ರೋಹವನ್ನು ದೇಶವಿರೋಧಿ ಎಂದು ಬದಲಾಯಿಸಲಾಗಿದೆ. ಎಲ್ಲ ತಪಾಸಣೆ ಮತ್ತು ಜಪ್ತಿ ಕಾರ್ಯಗಳನ್ನು ವಿಡಿಯೋ ರೆಕಾರ್ಡಿಂಗ್​ಅನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಕುರಿತು ಹೊಸ ಅಧ್ಯಾಯ ಸೇರಿಸಲಾಗಿದೆ. ಯಾವುದೇ ಮಗು ಖರೀದಿ ಮತ್ತು ಮಾರಾಟ ಮಾಡುವುದು ಘೋರ ಅಪರಾಧವೆಂದು ಪರಿಗಣಿಸಲಾಗಿದೆ ಮತ್ತು ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ.

ಈಗ ಕೇವಲ 358 ಸೆಕ್ಷನ್​ಗಳು: ಭಾರತೀಯ ದಂಡ ಸಂಹಿತೆಯಲ್ಲಿನ 511 ಸೆಕ್ಷನ್​ಗಳ ಬದಲಿಗೆ ಕೇವಲ 358 ಸೆಕ್ಷನ್​ಗಳು ಒಳಗೊಂಡಿವೆ. ಉದಾಹರಣೆಗೆ, ಸೆಕ್ಷನ್​ 6ರಿಂದ 52ರ ವರೆಗಿನ ವ್ಯಾಖ್ಯಾನಗಳನ್ನು ಒಂದು ಸೆಕ್ಷನ್​ ಅಡಿಯಲ್ಲಿ ತರಲಾಗಿದೆ. 18 ಸೆಕ್ಷನ್​ಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ವಿವಾಹದ ಸುಳ್ಳು ಭರವಸೆಯ ಪ್ರಕರಣಗಳು, ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರ, ಗುಂಪು ಹತ್ಯೆ, ಸರಗಳ್ಳತನ ಇತ್ಯಾದಿಗಳು ವರದಿಯಾಗುತ್ತವೆ. ಆದರೆ, ಪ್ರಸ್ತುತ ಭಾರತೀಯ ದಂಡ ಸಂಹಿತೆ ಅಂತಹ ಘಟನೆಗಳನ್ನು ಎದುರಿಸಲು ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿಲ್ಲ. ಈಗ ಇವುಗಳನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಠಾಣೆಗೆ ಹೋಗುವ ಅಗತ್ಯವಿಲ್ಲ: ಹೊಸ ಕಾನೂನುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ಈಗ ದೈಹಿಕವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲದೇ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದು. ಇದು ಸುಲಭವಾಗಿ ಮತ್ತು ತ್ವರಿತವಾಗಿ ವರದಿ ಮಾಡಲು ಅನುಮತಿಸುತ್ತದೆ. ಪೊಲೀಸರಿಂದ ತ್ವರಿತ ಕ್ರಮವನ್ನು ಸುಗಮಗೊಳಿಸುತ್ತದೆ. ಝೀರೋ ಎಫ್‌ಐಆರ್‌ನ ಪರಿಚಯದೊಂದಿಗೆ ಒಬ್ಬ ವ್ಯಕ್ತಿಯು ಅಧಿಕಾರ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಬಹುದು.

ಕಾನೂನಿನಲ್ಲಿನ ಹೊಸ ಸೇರ್ಪಡೆ: ಇದು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವನ್ನು ನಿವಾರಿಸುತ್ತದೆ ಮತ್ತು ಅಪರಾಧದ ತಕ್ಷಣದ ವರದಿಯನ್ನು ಖಚಿತಪಡಿಸುತ್ತದೆ. ಕಾನೂನಿನಲ್ಲಿನ ಆಸಕ್ತಿದಾಯಕ ಸೇರ್ಪಡೆಯೆಂದರೆ, ಬಂಧನದ ಸಂದರ್ಭದಲ್ಲಿ ವ್ಯಕ್ತಿಯು ತನ್ನ ಆಯ್ಕೆಯ ವ್ಯಕ್ತಿಗೆ ತನ್ನ ಪರಿಸ್ಥಿತಿಯ ಬಗ್ಗೆ ತಿಳಿಸುವ ಹಕ್ಕನ್ನು ಹೊಂದಿರುತ್ತಾನೆ. ಇದು ಬಂಧಿತ ವ್ಯಕ್ತಿಗೆ ತಕ್ಷಣದ ಬೆಂಬಲ ಮತ್ತು ಸಹಾಯವನ್ನು ಖಚಿತಪಡಿಸುತ್ತದೆ.

ಠಾಣೆಗಳಲ್ಲಿ ಬಂಧನದ ವಿವರ: ಇದಲ್ಲದೆ, ಬಂಧನದ ವಿವರಗಳನ್ನು ಈಗ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಬಂಧಿತ ವ್ಯಕ್ತಿಯ ಕುಟುಂಬಗಳು ಮತ್ತು ಸ್ನೇಹಿತರಿಗೆ ಪ್ರಮುಖ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಪ್ರಕರಣಗಳು ಮತ್ತು ತನಿಖೆಗಳನ್ನು ಬಲಪಡಿಸಲು ಫೋರೆನ್ಸಿಕ್ ತಜ್ಞರು ಗಂಭೀರ ಅಪರಾಧಗಳ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ.

ಸಂತ್ರಸ್ತರಿಗೆ ಉಚಿತ ಚಿಕಿತ್ಸೆ: ಹೊಸ ಕಾನೂನುಗಳ ಅಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಸಂತ್ರಸ್ತರು ತಮ್ಮ ಪ್ರಕರಣದ ಪ್ರಗತಿಯನ್ನು 90 ದಿನಗಳಲ್ಲಿ ನಿಯಮಿತವಾಗಿ ಮಾಹಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ನಿಬಂಧನೆಯು ಸಂತ್ರಸ್ತರಿಗೆ ಮಾಹಿತಿ ನೀಡುತ್ತದೆ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಹೊಸ ಕಾನೂನುಗಳು ಎಲ್ಲ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಸಂತ್ರಸ್ತರಿಗೆ ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಖಾತರಿಪಡಿಸುತ್ತದೆ.

ಎಸ್‌ಎಂಎಸ್‌ ಮೂಲಕ ಸಮನ್ಸ್: ಎಸ್‌ಎಂಎಸ್‌ನಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಮನ್ಸ್ ಜಾರಿ ಮಾಡಬಹುದು. ಇದರಿಂದ ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು, ದಾಖಲೆಗಳನ್ನು ಕಡಿಮೆ ಮಾಡಬಹುದು ಮತ್ತು ಒಳಗೊಂಡಿರುವ ಎಲ್ಲ ಪಕ್ಷಗಳ ನಡುವೆ ಸಮರ್ಥ ಸಂವಹನ ಖಚಿತಪಡಿಸಿಕೊಳ್ಳಬಹುದು. ಜೊತೆಗೆ ಆರೋಪಿ ಮತ್ತು ಸಂತ್ರಸ್ತರು ಇಬ್ಬರೂ ಎಫ್‌ಐಆರ್, ಪೊಲೀಸ್ ವರದಿ, ಚಾರ್ಜ್ ಶೀಟ್, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳ ಪ್ರತಿಗಳನ್ನು 14 ದಿನಗಳಲ್ಲಿ ಸ್ವೀಕರಿಸಲು ಅರ್ಹರಾಗಿರುತ್ತಾರೆ.

ರಾಜಕೀಯ

B Nagendra ಗೆ Janardhana Reddy ಸವಾಲ್; 10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ ಎಂದ ಬಿಜೆಪಿ ಶಾಸಕ

Published

on

ಬಳ್ಳಾರಿ: ಸಚಿವ ಸ್ಥಾನಕ್ಕೆ B Nagendra ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ. ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ Janardhana Reddy, ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಾಲ್ಮೀಕಿ ನಿಗಮದ ಹಣದ ಅವ್ಯವಹಾರ ಪ್ರಕರಣ, ಅವರ ರಾಜಕೀಯ ಹಿನ್ನೆಲೆ ಹಾಗೂ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ನಾಗೇಂದ್ರ ಅವರು ಕಣ್ಣೀರು ಹಾಕುತ್ತಿರುವುದು ನಾಟಕ ಎಂದು ಟೀಕಿಸಿದರು. ಅಲ್ಲದೆ, ರಾಮಾಯಣದ ಶಂಭುಕನ ಕಥೆಯನ್ನು ರಾಜಕೀಯವಾಗಿ ಬಳಸಿಕೊಂಡು ಜನರನ್ನು ದಾರಿ ತಪ್ಪಿಸಬಾರದು ಎಂದು ಕಿಡಿಕಾರಿದರು.

‘ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ’

ನಾಗೇಂದ್ರ ಅವರು ತಮ್ಮ ರಾಜಕೀಯ ಹಿನ್ನೆಲೆ ಹಾಗೂ ಬಿಜೆಪಿ ಜೊತೆಗಿನ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ಜನಾರ್ದನ ರೆಡ್ಡಿ, ರಾಜಕೀಯಕ್ಕೆ ರಾಮಾಯಣದ ವಿಚಾರವನ್ನು ತರುವ ಮೊದಲು ಅದರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಶಂಭುಕನ ವಿಚಾರವಾಗಿ ಮಾತನಾಡುವ ನೈತಿಕತೆ ನಾಗೇಂದ್ರ ಅವರಿಗೆ ಇಲ್ಲ ಎಂದು ಟೀಕಿಸಿದ ಅವರು, ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿ ಹಲವು ಗಂಭೀರ ಆರೋಪಗಳನ್ನು ಮಾಡಿದರು. ನಾಗೇಂದ್ರ ಅವರು ಹಿಂದೆ ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ್ದರು ಎಂಬುದನ್ನೂ ಜನಾರ್ದನ ರೆಡ್ಡಿ ನೆನಪಿಸಿದರು.

ವಾಲ್ಮೀಕಿ ನಿಗಮದ ಪ್ರಕರಣ ಪ್ರಸ್ತಾಪಿಸಿ ವಾಗ್ದಾಳಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರ ಪ್ರಕರಣವನ್ನು ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರದ ಕುರಿತು ಪ್ರಶ್ನೆಗಳನ್ನು ಎತ್ತಿದರು.

ನಿಗಮದ ಹಣವನ್ನು ಚುನಾವಣಾ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ಆರೋಪಗಳನ್ನು ಪುನರುಚ್ಚರಿಸಿದ ಅವರು, ತೆಲಂಗಾಣ, ಗೋವಾ ಹಾಗೂ ಬಳ್ಳಾರಿ ಲೋಕಸಭಾ ಚುನಾವಣೆಗೆ ಹಣ ಬಳಕೆಯಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಕೆಲ ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವ ಬಗ್ಗೆ ನಾಗೇಂದ್ರ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ ಜನಾರ್ದನ ರೆಡ್ಡಿ, ಪ್ರಕರಣದಲ್ಲಿ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

‘10 ಶಾಸಕರಿಗೆ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಿ’

ರಾಜಕೀಯ ಸೋಲು-ಗೆಲುವಿನ ಕುರಿತು ನಾಗೇಂದ್ರ ನೀಡಿರುವ ಹೇಳಿಕೆಗಳಿಗೂ ಜನಾರ್ದನ ರೆಡ್ಡಿ ತಿರುಗೇಟು ನೀಡಿದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಸಂಗತಿ ಎಂದು ಹೇಳಿದ ಅವರು, ತಮ್ಮನ್ನು ಅಥವಾ ಇತರರನ್ನು ‘ರಿಜೆಕ್ಟೆಡ್ ಪೀಸ್’ ಎಂದು ಕರೆಯುವ ಮೊದಲು ರಾಜಕೀಯ ವಾಸ್ತವಾಂಶ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ನಾಗೇಂದ್ರ ಅವರಿಗೆ ನೇರ ಸವಾಲು ಹಾಕಿದ ಜನಾರ್ದನ ರೆಡ್ಡಿ, ಧೈರ್ಯವಿದ್ದರೆ ತುಕಾರಾಂ ಸೇರಿದಂತೆ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಬನ್ನಿ ಎಂದು ಹೇಳಿದರು.

ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲ್ಲದಿದ್ದರೆ ತಾನು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಸವಾಲು ಹಾಕಿದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹಣ ವರ್ಗಾವಣೆ ಕುರಿತು ಸ್ಪಷ್ಟನೆಗೆ ಆಗ್ರಹ

ವಾಲ್ಮೀಕಿ ನಿಗಮದ ಖಾತೆಯಿಂದ ಕೆಲವು ವ್ಯಕ್ತಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, ಈ ಹಣ ವರ್ಗಾವಣೆಯ ಉದ್ದೇಶವೇನು ಹಾಗೂ ಸಂಬಂಧಪಟ್ಟ ವ್ಯಕ್ತಿಗಳಿಗೂ ನಾಗೇಂದ್ರ ಅವರಿಗೂ ಇರುವ ಸಂಪರ್ಕವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಹಲವು ಮಂದಿ ಆರೋಪಿಗಳಾಗಿದ್ದಾರೆ ಎಂದು ಹೇಳಿದ ಅವರು, ನಿಗಮದ ಹಣದ ದುರ್ಬಳಕೆಯ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆ ರಾಜಕೀಯಕ್ಕೆ ಹೊಸ ತಿರುವು

ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಜನಾರ್ದನ ರೆಡ್ಡಿ ಅವರ ಈ ವಾಗ್ದಾಳಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

ನಾಗೇಂದ್ರ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸುತ್ತಿದ್ದು, ಪ್ರಕರಣದ ತನಿಖೆಯ ನಂತರ ಸತ್ಯ ಹೊರಬರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರು ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ರಾಜಕೀಯ ಒತ್ತಡವನ್ನು ಮುಂದುವರಿಸಿದ್ದಾರೆ.

ಹೀಗಾಗಿ ನಾಗೇಂದ್ರ ರಾಜೀನಾಮೆ ಬೆಳವಣಿಗೆಯ ನಡುವೆಯೇ ಜನಾರ್ದನ ರೆಡ್ಡಿ ಮಾಡಿರುವ ಆರೋಪಗಳು ಹಾಗೂ ಹಾಕಿರುವ ಚುನಾವಣಾ ಸವಾಲು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

Continue Reading

ಅಪರಾಧ

Bengaluru ನಲ್ಲಿ ವಿವಾದಿತ ‘Peptide Party’ ರದ್ದು; FDA ನೋಟಿಸ್ ಬಳಿಕ ಆಯೋಜಕರಿಗೆ ಶಾಕ್

Published

on

ಬೆಂಗಳೂರು: Bengaluru ರಿನ ಕೋರಮಂಗಲದಲ್ಲಿ ಆಗಸ್ಟ್ 29ರಂದು ಆಯೋಜಿಸಲಾಗಿದ್ದ ವಿವಾದಾತ್ಮಕ Peptide Party ಇದೀಗ ರದ್ದಾಗಿದೆ. ಪೆಪ್ಟೈಡ್‌ಗಳ ಬಳಕೆ ಹಾಗೂ ಅವುಗಳ ಉಚಿತ ವಿತರಣೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರಗೊಂಡ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆ ತನಿಖೆ ಕೈಗೊಂಡಿತ್ತು. ಇಲಾಖೆಯಿಂದ ನೋಟಿಸ್ ಜಾರಿಯಾದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

‘ಅಪ್‌ಸರ್ಜ್ ಲ್ಯಾಬ್ಸ್’ ಸಂಸ್ಥೆಯ ಅನುಷ್ಕಾ ಸಿಂಗ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ. ಇದನ್ನು “ಭಾರತದ ಮೊದಲ ಪೆಪ್ಟೈಡ್ ಪಾರ್ಟಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪೆಪ್ಟೈಡ್‌ಗಳ ಉಚಿತ ವಿತರಣೆ, ಸಂಗೀತ, ಆಹಾರ ಹಾಗೂ ವಿವಿಧ ಆಟಗಳನ್ನು ಆಯೋಜಿಸುವುದಾಗಿ ತಿಳಿಸಲಾಗಿತ್ತು.

ಆದರೆ, ವೈದ್ಯಕೀಯ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ಪರಿಣಿತರು ಇಂತಹ ಕಾರ್ಯಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ವೈದ್ಯರ ಸೂಕ್ತ ಸಲಹೆ ಅಥವಾ ಮೇಲ್ವಿಚಾರಣೆಯಿಲ್ಲದೆ ಪೆಪ್ಟೈಡ್‌ಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿತ್ತು.

ಪೆಪ್ಟೈಡ್ ಪಾರ್ಟಿಗೆ FDA ನೋಟಿಸ್

ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಕಾರ್ಯಕ್ರಮದ ಕುರಿತು ತನಿಖೆ ಆರಂಭಿಸಿತು. ಕಾರ್ಯಕ್ರಮದಲ್ಲಿ ವಿತರಿಸಲು ಉದ್ದೇಶಿಸಲಾಗಿದ್ದ ಪೆಪ್ಟೈಡ್‌ಗಳ ಕುರಿತು ಆಯೋಜಕರಿಂದ ಹಲವು ದಾಖಲೆಗಳನ್ನು ಕೇಳಲಾಗಿದೆ.

ಪೆಪ್ಟೈಡ್‌ಗಳ ಸಂಯೋಜನೆ, ಡೋಸೇಜ್, ತಯಾರಕರ ವಿವರ ಮತ್ತು ಬ್ಯಾಚ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಇದರ ಜೊತೆಗೆ ತೂಕ ಇಳಿಕೆ, ಸ್ನಾಯುಗಳ ಬೆಳವಣಿಗೆ ಮತ್ತು ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳಿಸುವಂತಹ ಚಿಕಿತ್ಸಕ ಹಕ್ಕುಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಂತೆ ಕಾರಣ ಕೇಳಿ ನೋಟಿಸ್ ನೀಡಿದೆ.

ಈ ಕಟ್ಟುನಿಟ್ಟಿನ ಕ್ರಮದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

‘ಇದು ಶೈಕ್ಷಣಿಕ ಸಭೆ’ ಎಂದ ಆಯೋಜಕರು

ಕಾರ್ಯಕ್ರಮದ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆಯ ಸಂಸ್ಥಾಪಕ ಸೌಮ್ಯ ಜೈನ್, ಇದು ಕೇವಲ ಶೈಕ್ಷಣಿಕ ಉದ್ದೇಶದ ಸಭೆಯಾಗಿತ್ತು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಇಂಜೆಕ್ಷನ್ ಅಥವಾ ಔಷಧಿಗಳ ಮಾರಾಟ ನಡೆಸುವ ಉದ್ದೇಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಸಂಪೂರ್ಣವಾಗಿ ಬದ್ಧರಾಗಿರುವುದಾಗಿ ತಿಳಿಸಿರುವ ಆಯೋಜಕರು, ಎಫ್‌ಡಿಎ ಕೇಳಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.

ಏನಿದು ಪೆಪ್ಟೈಡ್?

ಇತ್ತೀಚಿನ ವರ್ಷಗಳಲ್ಲಿ ಪೆಪ್ಟೈಡ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ದೇಹದ ತೂಕ ನಿರ್ವಹಣೆ, ಸ್ನಾಯುಗಳ ಬೆಳವಣಿಗೆ, ಚರ್ಮದ ಆರೈಕೆ ಹಾಗೂ ವಯಸ್ಸಾಗುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಪೆಪ್ಟೈಡ್ ಆಧಾರಿತ ಉತ್ಪನ್ನಗಳ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಚಾರ ನಡೆಯುತ್ತಿದೆ.

ವಿಶೇಷವಾಗಿ ಕೆಲವು ಇನ್‌ಫ್ಲುಯೆನ್ಸರ್‌ಗಳು ಮತ್ತು ಜಿಮ್ ಸಮುದಾಯಗಳಲ್ಲಿ ಪೆಪ್ಟೈಡ್ ಉತ್ಪನ್ನಗಳ ಬಳಕೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದಾಗಿ ವೈದ್ಯಕೀಯ ಸಲಹೆಯಿಲ್ಲದೆ ಇಂತಹ ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವೂ ಇದೆ.

ಪೆಪ್ಟೈಡ್ ಎಂಬುದು ಅಮೈನೊ ಆಮ್ಲಗಳ ಸರಪಳಿಯಿಂದ ನಿರ್ಮಿತವಾಗಿರುವ ಜೈವಿಕ ಅಣುಗಳ ಒಂದು ವರ್ಗ. ಆದರೆ ಪ್ರತಿಯೊಂದು ಪೆಪ್ಟೈಡ್ ಉತ್ಪನ್ನವೂ ಒಂದೇ ರೀತಿಯ ಬಳಕೆ ಅಥವಾ ಸುರಕ್ಷತಾ ಮಾನದಂಡಗಳನ್ನು ಹೊಂದಿರುವುದಿಲ್ಲ. ಉತ್ಪನ್ನದ ಸ್ವರೂಪ, ಬಳಕೆ ಮತ್ತು ನಿಯಂತ್ರಣದ ಆಧಾರದ ಮೇಲೆ ಅದರ ಸುರಕ್ಷತೆ ಹಾಗೂ ಪರಿಣಾಮ ಬದಲಾಗಬಹುದು.

ಹೀಗಾಗಿ ವೈದ್ಯಕೀಯ ಉದ್ದೇಶಕ್ಕಾಗಿ ಬಳಸುವ ಯಾವುದೇ ಪೆಪ್ಟೈಡ್ ಉತ್ಪನ್ನವನ್ನು ತಜ್ಞರ ಸಲಹೆಯಿಲ್ಲದೆ ಬಳಸುವುದು ಸೂಕ್ತವಲ್ಲ ಎಂಬುದು ಆರೋಗ್ಯ ತಜ್ಞರ ಪ್ರಮುಖ ಎಚ್ಚರಿಕೆಯಾಗಿದೆ.

ಸಾಮಾಜಿಕ ಜಾಲತಾಣಗಳ ಪ್ರಚಾರದ ಮೇಲೂ ಪ್ರಶ್ನೆ

ಪೆಪ್ಟೈಡ್‌ಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ವೈಜ್ಞಾನಿಕ ಪುರಾವೆಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಅನುಭವಗಳು ಮತ್ತು ಪ್ರಚಾರಾತ್ಮಕ ಹೇಳಿಕೆಗಳ ಆಧಾರದ ಮೇಲೆ ಇಂತಹ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವುದು ಅಪಾಯಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೋರಮಂಗಲದ ಕಾರ್ಯಕ್ರಮ ರದ್ದಾಗಿರುವುದು, ವೈದ್ಯಕೀಯ ಅಥವಾ ಆರೋಗ್ಯ ಸಂಬಂಧಿತ ಉತ್ಪನ್ನಗಳನ್ನು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡುವಾಗ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಬೆಂಗಳೂರಿನ ‘ಪೆಪ್ಟೈಡ್ ಪಾರ್ಟಿ’ ಎಫ್‌ಡಿಎ ತನಿಖೆ ಹಾಗೂ ನೋಟಿಸ್ ಬಳಿಕ ರದ್ದಾಗಿದ್ದು, ಪೆಪ್ಟೈಡ್ ಉತ್ಪನ್ನಗಳ ಬಳಕೆ, ಅವುಗಳ ಪ್ರಚಾರ ಮತ್ತು ನಿಯಂತ್ರಣದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

Nepal-Tibet ಪ್ರವಾಹದ ಭೀಕರ ದೃಶ್ಯ ಚೀನಾದಲ್ಲಿ ಕಾಣೆಯಾಗಿದ್ದೇಕೆ? ವೈರಲ್ ವಿಡಿಯೋಗೆ ಸೆನ್ಸಾರ್!

Published

on

ಬೆಂಗಳೂರು: Nepal ಹಾಗೂ Tibet ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಚೀನಾದಲ್ಲಿ ಮಾತ್ರ ಅವುಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಗಯಿರಾಂಗ್ ಬಂದರು ಪ್ರದೇಶದಲ್ಲಿ ಪ್ರವಾಹದ ನೀರು ರಭಸವಾಗಿ ನುಗ್ಗಿ, ದಾರಿಯಲ್ಲಿದ್ದ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಗಯಿರಾಂಗ್ ಬಂದರು ನೇಪಾಳ ಮತ್ತು ಟಿಬೆಟ್ ನಡುವಿನ ಪ್ರಮುಖ ಗಡಿ ಸಂಪರ್ಕ ಕೇಂದ್ರಗಳಲ್ಲಿ ಒಂದಾಗಿದೆ. ಭೀಕರ ಪ್ರವಾಹದ ನೀರು ಏಕಾಏಕಿ ನುಗ್ಗಿದ ಪರಿಣಾಮ ನೂರಾರು ಜನರು ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಈ ವಿಡಿಯೋಗಳು ವಿಶ್ವದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದರೂ, ಚೀನಾದ ಸರ್ಕಾರಿ ಮಾಧ್ಯಮಗಳಲ್ಲಿ ಮಾತ್ರ ಇಂತಹ ದೃಶ್ಯಗಳ ಪ್ರಸಾರ ಸೀಮಿತವಾಗಿದೆ ಎಂಬ ವರದಿಗಳು ಬಂದಿವೆ.

ಚೀನಾದಲ್ಲಿ ಪ್ರವಾಹದ ವಿಡಿಯೋಗಳು ಕಾಣೆಯಾಗಿದ್ದೇಕೆ?

ಚೀನಾದ ಸರ್ಕಾರಿ ಪ್ರಮುಖ ಸುದ್ದಿಬುಲೆಟಿನ್‌ನಲ್ಲಿ ಈ ಘಟನೆಯ ಕುರಿತು ಇದುವರೆಗೆ ಒಂದು ಸ್ಥಿರಚಿತ್ರ ಮಾತ್ರ ಪ್ರಸಾರವಾಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಚೀನಾದ ಕಟ್ಟುನಿಟ್ಟಿನ ಇಂಟರ್‌ನೆಟ್ ನಿಯಂತ್ರಣ ವ್ಯವಸ್ಥೆಯಿಂದಾಗಿ ಪ್ರವಾಹದ ವಿಡಿಯೋಗಳು ಮತ್ತು ಘಟನೆಯ ಕುರಿತು ಬಳಕೆದಾರರು ಹಂಚಿಕೊಂಡ ಮಾಹಿತಿಯನ್ನು ಹುಡುಕುವುದು ಕಷ್ಟವಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ನೇಪಾಳದ ಭಾಗದಲ್ಲಿ ಪ್ರವಾಹದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಚೀನಾದ ಅಧಿಕಾರಿಗಳು ಮಾತ್ರ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ನೂರಾರು ತುರ್ತು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ.

ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ತುರ್ತು ಸಭೆ

ಪ್ರವಾಹ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸುವಂತೆ ಸೂಚಿಸಿದ್ದಾರೆ. ಚೀನಾದ ಪ್ರಧಾನಿ ಲಿ ಕಿಯಾಂಗ್ ಕೂಡ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಚೀನಾದ ಸರ್ಕಾರಿ ಮಾಧ್ಯಮಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕೆಸರು ಮತ್ತು ಬಂಡೆಗಳಿಂದ ತುಂಬಿರುವ ಪ್ರದೇಶಗಳಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಪ್ರಸಾರವಾಗಿವೆ. ಪರ್ವತಗಳು ಮತ್ತು ಕಂದಕ ಪ್ರದೇಶಗಳಲ್ಲಿ ವಿಶೇಷ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.

ಟಿಬೆಟ್‌ ವಿಚಾರದಲ್ಲಿ ಚೀನಾದ ಕಟ್ಟುನಿಟ್ಟಿನ ನಿಯಂತ್ರಣ

ಟಿಬೆಟ್ ಹಲವು ದಶಕಗಳಿಂದ ಚೀನಾದ ರಾಜಕೀಯ ಹಾಗೂ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಟಿಬೆಟ್‌ಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು, ಪ್ರತಿಭಟನೆಗಳು ಮತ್ತು ದಲೈ ಲಾಮಾ ಕುರಿತ ವಿಚಾರಗಳಲ್ಲಿ ಚೀನಾ ಸರ್ಕಾರ ಕಟ್ಟುನಿಟ್ಟಿನ ನಿಲುವು ಹೊಂದಿದೆ.

ಈ ಹಿನ್ನೆಲೆ ಟಿಬೆಟ್‌ನಲ್ಲಿ ಸಂಭವಿಸಿದಂತಹ ದೊಡ್ಡ ಪ್ರಮಾಣದ ವಿಪತ್ತಿನ ಸಂದರ್ಭದಲ್ಲಿ ಸ್ಥಳೀಯ ಜನರ ಅನುಭವಗಳು ಮತ್ತು ಸ್ವತಂತ್ರ ದೃಶ್ಯಗಳು ಹೊರಜಗತ್ತಿಗೆ ತಲುಪುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿದೇಶಿ ಪತ್ರಕರ್ತರಿಗೆ ಟಿಬೆಟ್‌ಗೆ ತೆರಳಲು ಸಾಮಾನ್ಯವಾಗಿ ಸರ್ಕಾರದ ಅನುಮತಿ ಅಗತ್ಯವಿದೆ. ಹೀಗಾಗಿ ಸ್ಥಳೀಯರೊಂದಿಗೆ ನೇರ ಸಂಪರ್ಕ ಸಾಧಿಸುವುದು ಮತ್ತು ಸ್ವತಂತ್ರವಾಗಿ ಘಟನೆಗಳನ್ನು ವರದಿ ಮಾಡುವುದು ಸವಾಲಿನ ಸಂಗತಿಯಾಗಿದೆ.

ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತ್ರ ಹೆಚ್ಚು ಒತ್ತು

ಚೀನಾದ ಸರ್ಕಾರಿ ಮಾಧ್ಯಮಗಳು ಪ್ರವಾಹದ ಪರಿಣಾಮಗಳಿಗಿಂತ ರಕ್ಷಣಾ ಕಾರ್ಯಾಚರಣೆಯ ಚಿತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಅಪಾಯಕಾರಿ ಪ್ರದೇಶಗಳಿಗೆ ತೆರಳಿ ಸಿಲುಕಿರುವವರನ್ನು ಹುಡುಕುತ್ತಿರುವ ದೃಶ್ಯಗಳು ಪ್ರಸಾರವಾಗಿವೆ.

ಆದರೆ ಪ್ರವಾಹದಲ್ಲಿ ಸಿಲುಕಿದವರ ನೈಜ ಅನುಭವಗಳು, ನಾಪತ್ತೆಯಾದವರ ಕುಟುಂಬಗಳ ಆತಂಕ ಮತ್ತು ಪ್ರವಾಹದ ಆರಂಭಿಕ ಕ್ಷಣಗಳ ದೃಶ್ಯಗಳು ಬಹುತೇಕ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.

ಚೀನಾ ಸರ್ಕಾರದ ಪ್ರತಿಕ್ರಿಯೆ ನಿಧಾನವಾಗಿದೆ ಎನ್ನುವುದಕ್ಕಿಂತ, ಮಾಹಿತಿಯ ಪ್ರಸಾರವನ್ನು ನಿಯಂತ್ರಿಸುವ ಮೂಲಕ ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಭಾರೀ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರದ ಸಿದ್ಧತೆ ಮತ್ತು ನಿರ್ವಹಣೆಯ ಕುರಿತು ಸಾರ್ವಜನಿಕ ಅಸಮಾಧಾನ ಉಂಟಾಗದಂತೆ ನೋಡಿಕೊಳ್ಳುವುದು ಆಡಳಿತಕ್ಕೆ ಪ್ರಮುಖವಾಗಿರಬಹುದು.

ಒಟ್ಟಿನಲ್ಲಿ, ನೇಪಾಳ-ಟಿಬೆಟ್ ಗಡಿ ಪ್ರದೇಶದ ಭೀಕರ ಪ್ರವಾಹವು ಭಾರೀ ಮಾನವೀಯ ಸಂಕಷ್ಟವನ್ನು ಸೃಷ್ಟಿಸಿರುವ ನಡುವೆಯೇ, ಚೀನಾದಲ್ಲಿ ಅದರ ದೃಶ್ಯಗಳು ಮತ್ತು ಸ್ಥಳೀಯರ ಧ್ವನಿಗಳು ಸೀಮಿತವಾಗಿ ಮಾತ್ರ ಹೊರಬರುತ್ತಿರುವುದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Continue Reading

Trending