ಬೆಂಗಳೂರು
ಬೆಂಗಳೂರು TO ಮೈಸೂರು ಪಾದಯಾತ್ರೆ: ‘ದೋಸ್ತಿ’ಗಳಿಂದ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ಸಿದ್ಧತೆ – BJP JDS Padayatra
ಬೆಂಗಳೂರು: ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದ್ದು, ದೋಸ್ತಿ ಪಕ್ಷ ಜೆಡಿಎಸ್ ಜೊತೆಗೂಡಿ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಮುಂದಾಗಿದೆ. ಒಂದೂವರೆ ದಶಕದ ನಂತರ ರಾಜ್ಯದಲ್ಲಿ ಮೊದಲ ಬೃಹತ್ ರಾಜಕೀಯ ಹೋರಾಟದ ಪಾದಯಾತ್ರೆ ನಡೆಯುತ್ತಿದೆ.
ಮುಡಾ ಹಾಗು ವಾಲ್ಮೀಕಿ ನಿಗಮ ಹಗರಣ ಕುರಿತು ಸದನದಲ್ಲಿ ಚರ್ಚೆಗೆ ಸರಿಯಾದ ವೇದಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿದೆ. ಬೃಹತ್ ಪಾದಯಾತ್ರೆ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದೆ. ಅದಕ್ಕಾಗಿ 140 ಕಿಲೋಮೀಟರ್ಗಳ ಬೃಹತ್ ಪಾದಯಾತ್ರೆಗೆ ನಿರ್ಧರಿಸಲಾಗಿದೆ.
ಬೆಂಗಳೂರು ಹೊರವಲಯದ ನೈಸ್ ರೋಡ್ ಜಂಕ್ಷನ್ನಿಂದ ಪಾದಯಾತ್ರೆ ಆರಂಭಿಸಿ ಬಿಡದಿ, ರಾಮನಗರ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಮೈಸೂರಿಗೆ ಸಾಗಲು ಬಿಜೆಪಿ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೇವಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಸಾಗದೆ ಪ್ರಮುಖ ಪಟ್ಟಣಗಳ ಒಳಹಾದಿ ಮೂಲಕ ಸಾಗಿ ಜನರನ್ನು ತಲುಪಬೇಕು. ಅಲ್ಲಲ್ಲಿ ಸಮಾವೇಶಗಳನ್ನು ಆಯೋಜನೆ ಮಾಡುವ ಮೂಲಕ ಸರ್ಕಾರದ ಹಗರಣಗಳನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡಬೇಕು ಎಂದು ನಿರ್ಧರಿಸಿದ್ದು, ಅದಕ್ಕಾಗಿ ರೂಪುರೇಶೆ ಸಿದ್ದಪಡಿಸಲಾಗುತ್ತಿದೆ. ಯಾವ ಮಾರ್ಗದ ಮೂಲಕ ಸಾಗಬೇಕು. ಯಾವ ಪಟ್ಟಣದಲ್ಲಿ ಒಳಗೆ ಸಾಗಬೇಕು. ಸಮಾವೇಶಗಳು ಎಲ್ಲಿ ನಡೆಸಬೇಕು. ಮೈಸೂರಿನಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ಬೃಹತ್ ಪ್ರಮಾಣದಲ್ಲಿ ನಡೆಸುವ ಕುರಿತು ಅಂತಿಮ ಹಂತದ ಪರಿಶೀಲನೆಗಳು ನಡೆಯುತ್ತಿದೆ.
ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಸಾಗುವ ಇಡೀ ಮಾರ್ಗ ಜನತಾದಳದ ಕಾರಿಡಾರ್ ಆಗಿದೆ. ದಳಪತಿಗಳ ಕೋಟೆಯೊಳಗೆ ಕೇಸರಿ ಪಡೆ ನಡೆಸುತ್ತಿರುವ ಪಾದಯಾತ್ರೆ ಇದಾಗಿದೆ. ಜೆಡಿಎಸ್ ಈಗ ಎನ್ಡಿಎ ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪಾದಯಾತ್ರೆಯಲ್ಲಿ ಜನತಾದಳ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗುತ್ತಿದೆ. ಜನತಾದಳದ ವಿಶ್ವಾಸದೊಂದಿಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದು ಬಿಜೆಪಿಯ ಸಂಘಟಿತ ಕೇಡರ್ ಬೇಸ್ ಅಲ್ಲದ ಭಾಗವಾಗಿರುವ ಕಾರಣ ಪಾದಯಾತ್ರೆ ಕಳೆಗುಂದದಿರಲು ಜೆಡಿಎಸ್ನ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಸ್ಥಳೀಯ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ಪಾದಯಾತ್ರೆಯನ್ನು ಸಫಲಗೊಳಿಸಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಬೂತ್ ಮಟ್ಟದ ಸಿದ್ದತೆಗಳು ಆರಂಭವಾಗಿವೆ. ಉಭಯ ಪಕ್ಷಗಳ ವಿಧಾನಸಭಾವಾರು ನಾಯಕರು ಸಮ್ಮಿಳಿತ ರೀತಿಯಲ್ಲಿ ಕಾರ್ಯಕರ್ತರ ಪಡೆಯನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿರ್ಧಾರ ಮಾಡಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ಮಾಡಿದ್ದರೂ ದಿನಾಂಕವನ್ನು ಅಂತಿಮಗೊಳಿಸಿಲ್ಲ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದು, ದೆಹಲಿಯಲ್ಲಿರುವ ಹಿನ್ನೆಲೆ ಅವರೊಂದಿಗೆ ಚರ್ಚಿಸಲು ಸಾಧ್ಯವಾಗದ ಕಾರಣದಿಂದ ದಿನಾಂಕ ನಿಗದಿ ಬಾಕಿ ಉಳಿದಿದೆ. ಶನಿವಾರ ಹಾಗು ಭಾನುವಾರ ರಾಜ್ಯಕ್ಕೆ ಕುಮಾರಸ್ವಾಮಿ ಆಗಮಿಸಲಿಸಿದ್ದು, ಕುಮಾರಸ್ವಾಮಿ ಉಪಸ್ಥಿತಿಯಲ್ಲಿಯೇ ಉಭಯ ಪಕ್ಷಗಳ ನಾಯಕರು ಜಂಟಿ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 28 ರಂದು ಎನ್.ಡಿ.ಎ ಸಭೆ ನಡೆಸಿ ಪಾದಯಾತ್ರೆ ದಿನಾಂಕ ಹಾಗು ಮಾರ್ಗ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದರೂ ಬಿಜೆಪಿ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿಸಿ ಸದಾನದಗೌಡ, ಜಗದೀಶ್ ಶೆಟ್ಟರ್ ಸಾಂಕೇತಿಕವಾಗಿ ಪಾಲ್ಗೊಂಡು ಸಮಾವೇಶಗಳಲ್ಲಿ ಉಪಸ್ಥಿತರಿರುವಂತೆ ಮಾಡುವ ಲೆಕ್ಕಾಚಾರ ಇದೆ. ಇನ್ನು ಜೆಡಿಎಸ್ನಿಂದ ಕುಮಾರಸ್ವಾಮಿ ಸಂಸತ್ ಅಧಿವೇಶನದ ಕಾರಣದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದ್ದು, ಅವರು ಉದ್ಘಾಟಣೆ, ಸಮಾರೋಪದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅದು ಕೂಡು ಭಾನುವಾರದ ಸಭೆಯಲ್ಲಿ ಅಂತಿಮವಾಗಲಿದೆ.
2010 ರಲ್ಲಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದಂತೆ ಈಗ ಬಿಜೆಪಿ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದೆ. ಇದು 14 ವರ್ಷದ ನಂತರ ನಡೆಯುತ್ತಿರುವ ರಾಜ್ಯದ ಬೃಹತ್ ರಾಜಕೀಯ ಪಾದಯಾತ್ರೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ವೇಳೆ ಕಾಂಗ್ರೆಸ್ ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ನಡೆಸಿತ್ತಾದರೂ ಇದು ನೂರು ಕಿಲೋಮೀಟರ್ಗೂ ಹೆಚ್ಚಿನ ದೂರ ಕ್ರಮಿಸುವ ಬೃಹತ್ ಪಾದಯಾತ್ರೆಯಾಗಿದೆ.
ಕೇವಲ ಪಾದಯಾತ್ರೆ ನಡೆಸಿ ಸುಮ್ಮನಾಗದೆ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು, ಸಿಎಂ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಒಂದಲ್ಲಾ ಒಂದು ರೀತಿಯ ಹೋರಾಟವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಉಭಯ ಪಕ್ಷಗಳು ನಿರ್ಧರಿಸಿವೆ. ಹಾಗಾಗಿ ಪಾದಯಾತ್ರೆ ಹೋರಾಟದ ಆರಂಭ ಮಾತ್ರವಾಗಿದ್ದು, ಸಿಎಂ ರಾಜೀನಾಮೆವರೆಗೂ ನಿರಂತರ ಹೋರಾಟ ಇರಲಿವೆ. ಈ ಕುರಿತು ಬಿಜೆಪಿ ನಾಯಕ ಸಿಟಿ ರವಿ ಮಾಹಿತಿ ನೀಡಿದ್ದು, ಹಗರಣ ಆರೋಪದ ವಿಷಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಸದನದ ಒಳಗೆ ಮುಡಾ, ವಾಲ್ಮೀಕಿ ಹಗರಣ ಹೋರಾಟ ನಡೆಸಿರುವ ಬಿಜೆಪಿ ಜೆಡಿಎಸ್ ದೋಸ್ತಿಗಳು ಇದೀಗ ಸದನದ ಹೊರಗೆ ಪಾದಯಾತ್ರೆ ಮೂಲಕ ಬೃಹತ್ ಹೋರಾಟಕ್ಕೆ ನಿರ್ಧರಿಸಿವೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ದನೆಗೂ ಈ ಪಾದಯಾತ್ರೆ ಸಹಕಾರಿಯಾಗಲಿದ್ದು, ಮಿತ್ರಪಕ್ಷಗಳ ಒಗ್ಗಟ್ಟು ಬಲಗೊಳ್ಳಲಿದೆ ಎನ್ನುವ ವಿಶ್ವಾಸ ಉಭಯ ನಾಯಕರದ್ದಾಗಿದೆ.
ದೇಶ
ಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
ಬೆಂಗಳೂರು: ಐಷಾರಾಮಿ ಜೀವನಶೈಲಿ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಸರಾದ Bengaluru ನಗರದಲ್ಲಿ ಕೇವಲ 500 ರೂ.ಗಳಲ್ಲಿ ದಿನ ಕಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಯುವತಿ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕಾ ಮಂಡಲ್ ಎಂಬ ಮಹಿಳೆ, ಸೀಮಿತ ಬಜೆಟ್ನಲ್ಲಿ ನಗರ ಜೀವನ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದ್ದರು. ದಿನವನ್ನು ಇಡ್ಲಿ ಉಪಹಾರದಿಂದ ಆರಂಭಿಸಿದ ಅವರು, ಕ್ಯಾಬ್ ಬದಲು ಮೆಟ್ರೋ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಖರ್ಚನ್ನು ಕಡಿಮೆ ಮಾಡಲು ಸಹಾಯವಾಯಿತು.
ಹಗಲಿನಲ್ಲಿ ಚಹಾ ತೆಗೆದುಕೊಂಡು ಸಣ್ಣ ವಿರಾಮ ಮಾಡಿಕೊಂಡ ಅವರು, ಮಧ್ಯಾಹ್ನ ಊಟದ ವೇಳೆಗೆ ಸವಾಲು ಎದುರಿಸಿದರು. ಆಹಾರದ ಬೆಲೆಗಳು ಹೆಚ್ಚಿರುವುದರಿಂದ, 120 ರೂ. ಒಳಗೆ ಊಟ ಮುಗಿಸುವ ಗುರಿ ಇಟ್ಟುಕೊಂಡು ಖರ್ಚನ್ನು ನಿಯಂತ್ರಿಸಿದರು.
ಸಂಜೆ ವೇಳೆ ವಡಾ ಪಾವ್ ಮತ್ತು ಚಹಾ ಸೇವಿಸಿ ದಿನವನ್ನು ಮುಗಿಸಿದ ಪ್ರಿಯಾಂಕಾ, ಅಚ್ಚರಿಯ ರೀತಿಯಲ್ಲಿ ತಮ್ಮ ಬಜೆಟ್ನಿಂದ ಸುಮಾರು 200 ರೂ. ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಡಿಮೆ ಹಣದಲ್ಲೂ ಸರಿಯಾದ ಯೋಜನೆ ಇದ್ದರೆ ದಿನವನ್ನು ನಿರ್ವಹಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ, ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು Indira Canteen ನಲ್ಲಿ ಕಡಿಮೆ ದರದಲ್ಲಿ ಊಟ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇದು ಒಬ್ಬರಿಗೆ ಮಾತ್ರ ಸಾಧ್ಯ, ಕುಟುಂಬದೊಂದಿಗೆ ಬದುಕುವುದು ಬೆಂಗಳೂರಿನಲ್ಲಿ ಕಷ್ಟಕರ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಪ್ರಯೋಗ ನಗರ ಜೀವನದ ಖರ್ಚು ಹಾಗೂ ಬಜೆಟ್ ನಿರ್ವಹಣೆ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಅಪರಾಧ
ಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುತ್ತಿದ್ದರೆ, Bangalore Metropolitan Transport Corporation ನಲ್ಲಿ ಕೆಲವು ನೌಕರರು ಇದನ್ನು ದುರುಪಯೋಗ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ನಿರ್ವಾಹಕರು ಪುರುಷ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದರೆಂಬ ಆಘಾತಕಾರಿ ವಿಚಾರ ಪತ್ತೆಯಾಗಿದೆ. ಕನ್ನಡದಲ್ಲಿ ಮಾತ್ರ ಮುದ್ರಿತವಾಗಿರುವ ಟಿಕೆಟ್ ಮಾಹಿತಿಯನ್ನು ಬಳಸಿಕೊಂಡು, ಕನ್ನಡ ಓದಲು ಬಾರದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು.
ಇನ್ನಷ್ಟು ಗಂಭೀರವಾಗಿ, ಅಧಿಕೃತ ಯುಪಿಐ ಕ್ಯೂಆರ್ ಕೋಡ್ಗಳನ್ನು ತೆಗೆದುಹಾಕಿ, ತಮ್ಮ ವೈಯಕ್ತಿಕ ಖಾತೆಗಳ ಕ್ಯೂಆರ್ ಕೋಡ್ ಮೂಲಕ ಹಣವನ್ನು ನೇರವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲಾಗುತ್ತಿತ್ತು. ಈ ಮೂಲಕ ಸಾರಿಗೆ ನಿಗಮದ ಆದಾಯಕ್ಕೂ ನಷ್ಟ ಉಂಟಾಗಿದೆ.
ದೂರುಗಳ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇದರಲ್ಲಿ ನಾಲ್ವರು ಪ್ರಮುಖ ನಿರ್ವಾಹಕರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅವರ ಖಾತೆಗಳಲ್ಲಿ ಸಾವಿರಾರು ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟಿದೆ.
ಈ ಘಟನೆ ಹಿನ್ನೆಲೆ, ಬಿಎಂಟಿಸಿ ಅಧಿಕಾರಿಗಳು ಉಳಿದ ಸಿಬ್ಬಂದಿಗಳ ಮೇಲೂ ನಿಗಾ ವಹಿಸಿದ್ದು, ಇಂತಹ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಘಟನೆಗಳು ಸಾರಿಗೆ ವ್ಯವಸ್ಥೆಯ ಮೇಲ್ವಿಚಾರಣೆ ಬಲಪಡಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ದೇಶ
ಜಮೀರ್ ವಿರುದ್ಧ ಮುಸ್ಲಿಂ ನಾಯಕರ ಅಸಮಾಧಾನ: ಕಾಂಗ್ರೆಸ್ಗೆ ಹೊಸ ತಲೆನೋವು
ಬೆಂಗಳೂರು: ದಾವಣಗೆರೆ ಉಪಚುನಾವಣೆ ಮುಗಿದರೂ ಕಾಂಗ್ರೆಸ್ ಪಕ್ಷದ ಒಳಜಗಳ ಮಾತ್ರ ಇನ್ನೂ ಶಮನವಾಗಿಲ್ಲ. Indian National Congress ಒಳಗೆ ಬಂಡಾಯ, ಅಸಮಾಧಾನ ಮತ್ತಷ್ಟು ತೀವ್ರವಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ವಿಚಾರವಾಗಿ ಆರಂಭವಾದ ಅಸಮಾಧಾನ ಈಗ ಚುನಾವಣೆಯ ಬಳಿಕವೂ ಮುಂದುವರಿದಿದೆ.
ಸಚಿವ Zameer Ahmed Khan ವಿರುದ್ಧ ಸ್ವಪಕ್ಷದವರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದಿರುವುದು ಹಾಗೂ ಮುಸ್ಲಿಂ ನಾಯಕರನ್ನು ಮನವೊಲಿಸಲು ವಿಫಲವಾದ ಕಾರಣ, ಅವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಹೈಕಮಾಂಡ್ಗೆ ವರದಿ ಕೂಡ ಸಲ್ಲಿಕೆಯಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ, ಡಿಸಿಎಂ D. K. Shivakumar ಪ್ರತಿಕ್ರಿಯಿಸಿ, ಈ ಸಂಬಂಧ ವರದಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳು ಸಹಜವಾದರೂ, ಪಕ್ಷವು ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ.
ಈ ನಡುವೆ ಸಂಪುಟ ಪುನಾರಚನೆ ವಿಚಾರವೂ ಕಾಂಗ್ರೆಸ್ನಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಸುಮಾರು 40ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಗೆ ತೆರಳಿ, Mallikarjun Kharge ಹಾಗೂ Rahul Gandhi ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಂಡಿಸಲು ತಯಾರಾಗಿದ್ದಾರೆ.
ಇದರ ಜೊತೆಗೆ, ಮುಖ್ಯಮಂತ್ರಿ Siddaramaiah ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಒಟ್ಟಿನಲ್ಲಿ ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ಗೆ ಒಳಜಗಳದ ಬಾಗಿಲು ತೆರೆದಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳ ಸಾಧ್ಯತೆ ಹೆಚ್ಚಾಗಿದೆ.
-
ದೇಶ6 hours agoKumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
-
ಕ್ರೀಡೆ9 hours agoCSK ಮೊದಲ ಜಯದ ನಡುವೆ ವಿವಾದ: ಡಿಸಿ ತಂಡದ ಕೋಪ ಸಿಡಿತ
-
ಅಪರಾಧ7 hours agoಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
-
ದೇಶ7 hours ago“ಪರಮಾಣು ಬದ್ಧತೆ ಕಾಣಿಸಲಿಲ್ಲ” – ವ್ಯಾನ್ಸ್ ಹೇಳಿಕೆ
-
ದೇಶ6 hours agoಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
-
ಕ್ರೀಡೆ9 hours agoಕುಸ್ತಿ ಪರಂಪರೆಗೆ ಹೊಸ ಚೈತನ್ಯ: ಕುಂಬಾರ ಕೊಪ್ಪಲಲ್ಲಿ ಕ್ರೀಡಾಂಗಣ ನಿರ್ಮಾಣ
-
ದೇಶ9 hours agoಹೆಲಿಪ್ಯಾಡ್ನಿಂದ ಲೈವ್ ಕಮೆಂಟರಿ: ಪ್ರಧಾನಿ ಮೋದಿ ಹೊಸ ಪ್ರಯೋಗ
-
ದೇಶ8 hours agoಶಾಂತಿ ಮುಖ್ಯ, ಸ್ಪರ್ಧೆ ಬೇಡ: ಪಾಕಿಸ್ತಾನ ಬಗ್ಗೆ ತರೂರು ಸ್ಪಷ್ಟನೆ
