ಅಪರಾಧ
ಟಾಪರ್ ವೈದ್ಯೆಯಿಂದ ಉಗ್ರ ನಾಯಕಿಯಾಗಿದ್ದ ಶಾಹೀನ್ ಶಾಹಿದ್
ನವದೆಹಲಿ: ಕೆಂಪುಕೋಟೆ ಬಳಿ ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ ಹೊಸ ಹೊಸ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಪರಿಶೀಲಿಸುತ್ತಿದ್ದಂತೆಯೇ, ದೇಶದ ಭದ್ರತೆಗೆ ಸವಾಲು ಎಸೆದಂತಹ ಒಂದು ಚರಿತ್ರೆ ಬಹಿರಂಗವಾಗಿದೆ — ಅದು ಭಾರತದಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ (JeM) ಮಹಿಳಾ ವಿಭಾಗ ಸ್ಥಾಪಿಸಿದ ವೈದ್ಯೆ ಶಾಹೀನ್ ಶಾಹಿದ್ (46).
ಹರಿಯಾಣದ ಫರಿದಾಬಾದ್ನಲ್ಲಿ ಪತ್ತೆಯಾದ ಬೃಹತ್ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಕ್ನೋ ನಿವಾಸಿ ಡಾ. ಶಾಹೀನ್ ಶಾಹಿದ್ ಬಂಧಿತರಾಗಿದ್ದಾರೆ. ಅವರ ಮನೆಯಿಂದ ರಷ್ಯಾದ ಅಸಾಲ್ಟ್ ರೈಫಲ್ ಹಾಗೂ ಲೈವ್ ಕಾರ್ಟ್ರಿಜ್ಗಳು ವಶಪಡಿಸಿಕೊಳ್ಳಲಾಗಿದೆ.
ಲಕ್ನೋ ಸರ್ಕಾರಿ ಬಾಲಕಿಯರ ಕಾಲೇಜಿನ ಟಾಪರ್ ಆಗಿದ್ದ ಶಾಹೀನ್, ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದಲ್ಲಿ ತೇರ್ಗಡೆಯಾಗಿ ಪ್ರಯಾಗ್ರಾಜ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದರು. 2009ರಲ್ಲಿ ಕಾನ್ಪುರದ ಗಣೇಶ್ ಶಂಕರ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಪ್ರಾರಂಭಿಸಿದ ಅವರು, ನಂತರ ಕನೌಜ್ ಕಾಲೇಜಿಗೆ ವರ್ಗಾವಣೆಗೊಂಡು 2013ರವರೆಗೆ ವೈದ್ಯಕೀಯ ಸೇವೆ ಸಲ್ಲಿಸಿದರು.
ಈ ಅವಧಿಯಲ್ಲಿ ನೇತ್ರ ತಜ್ಞ ಡಾ. ಜಾಫರ್ ಸಯೀದ್ ಅವರನ್ನು ಮದುವೆಯಾದರೂ, ದಂಪತಿಯ ಮಧ್ಯೆ ಕಲಹಗಳು ಹೆಚ್ಚಾಗಿ, 2015ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಶಾಹೀನ್ ಉಗ್ರ ಮುಜಮ್ಮಿಲ್ ಜೊತೆ ಸಂಪರ್ಕ ಬೆಳೆಸಿದ್ದು, ಅದೇ ಅವಳ ಜೀವನದ ತಿರುವಾಗಿತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಕಾಲೇಜು ದಾಖಲೆಗಳ ಪ್ರಕಾರ, ಶಾಹೀನ್ 2013ರಲ್ಲಿ ಯಾವುದೇ ಸೂಚನೆ ನೀಡದೇ ಕರ್ತವ್ಯದಿಂದ ಗೈರುಹಾಜರಾಗಿದ್ದರು. ಸಂಪರ್ಕಿಸಲು ಹಲವು ಪ್ರಯತ್ನಗಳಾದರೂ ಫಲಕಾರಿಯಾಗದೆ, 2021ರಲ್ಲಿ ಸರ್ಕಾರ ಅವರನ್ನು ಸೇವೆಯಿಂದ ವಜಾ ಮಾಡಿತು.
ನಂತರ ಅವರು ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಬೆಳೆಸಿ, ಅಲ್ಲಿಯೇ ಮುಜಮ್ಮಿಲ್ನನ್ನು ಭೇಟಿಯಾದರು. ಇದೇ ಸಮಯದಲ್ಲಿ ಶಾಹೀನ್ ಜೈಶ್ ಮಹಿಳಾ ವಿಂಗ್ಗೆ ಭಾರತದ ನಾಯಕರಾಗಿ ನೇಮಕಗೊಂಡು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜಮಾತ್ ಉಲ್-ಮೊಮಿನಾತ್ ಸಂಘಟನೆಯ ಕಮಾಂಡ್ ಜವಾಬ್ದಾರಿ ವಹಿಸಿಕೊಂಡಿದ್ದರು.
ತನಿಖಾಧಿಕಾರಿಗಳ ಪ್ರಕಾರ, ಶಾಹೀನ್ನ ಬಂಧನದಿಂದ ಭಾರತದಲ್ಲಿನ ಉಗ್ರರ ಮಹಿಳಾ ನೆಟ್ವರ್ಕ್ ಬಯಲಾಗುವ ಸಾಧ್ಯತೆ ಹೆಚ್ಚಿದೆ.
ರಾಜ್ಯ
Bhatkal ದಲ್ಲಿ ಉದ್ವಿಗ್ನ ಪರಿಸ್ಥಿತಿ: ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ Bhatkal ತಾಲೂಕಿನ ತಲಾಂದದಲ್ಲಿ Ganesha ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ ನಡೆದ ಘಟನೆಯಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಗಣೇಶ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿತ್ತು. ತಲಾಂದದಿಂದ ಹೊರಟ ಮೆರವಣಿಗೆ ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿದ್ದ ಸಂದರ್ಭದಲ್ಲಿ, ಮಾರ್ಗದಲ್ಲಿದ್ದ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾ ಮೇಲೆ ಅಪರಿಚಿತರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.
ಕಲ್ಲು ತೂರಾಟದಿಂದ ಮಸೀದಿ ಹಾಗೂ ಮದರಸಾದ ಕಿಟಕಿ ಗಾಜುಗಳು ಒಡೆದು ಹಾನಿಯಾಗಿವೆ. ಘಟನೆ ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಪ್ಪಿತಸ್ಥರ ಬಂಧನಕ್ಕೆ ಆಗ್ರಹ
ಘಟನೆಯ ಮಾಹಿತಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಂದರು ರಸ್ತೆ ನಿವಾಸಿಗಳಾದ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶೋತ್ಸವ ಸಮಿತಿ ಸದಸ್ಯರ ವಿಚಾರಣೆ
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಕಲ್ಲು ತೂರಾಟ ನಡೆಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಪೊಲೀಸ್ ಅಧಿಕಾರಿಗಳಿಂದ ಸ್ಥಳದಲ್ಲೇ ಮೊಕ್ಕಾಂ
ಪಟ್ಟಣದಲ್ಲಿ ಮತ್ತಷ್ಟು ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ ಹಾಗೂ ಎಎಸ್ಪಿ ರಾನು ಗುಪ್ತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್ಐ ನವೀನ ನಾಯ್ಕ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಲ್ಲು ತೂರಾಟದ ಹಿಂದಿರುವವರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ.
ಅಪರಾಧ
Renukaswamy ಕೇಸ್ನಲ್ಲಿ ಹೊಸ ತಿರುವು: ಪ್ರದೋಷ್ ವಿಚಾರದಲ್ಲಿ ದರ್ಶನ್ ಪರ ವಕೀಲರ ಹೊಸ ಮನವಿ
ಬೆಂಗಳೂರು: ಚಿತ್ರದುರ್ಗದ Renukaswamy ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಷ್ ಮಾಫಿ ಸಾಕ್ಷಿ (Approver) ಆಗುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯುವಂತೆ ಕೋರಿ ನಟ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಇಂದು ನಡೆದ ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಹಶ್ಮತ್ ಪಾಷಾ, ಪ್ರದೋಷ್ ಪರ ವಕೀಲ ದಿವಾಕರ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ನಡುವೆ ತೀವ್ರ ವಾದ-ಪ್ರತಿವಾದ ನಡೆದಿದೆ.
ಪ್ರದೋಷ್ ವಿರುದ್ಧದ ಜೈಲು ಮೊಬೈಲ್ ಪ್ರಕರಣ ಪ್ರಸ್ತಾಪ
ದರ್ಶನ್ ಪರ ವಕೀಲ ಹಶ್ಮತ್ ಪಾಷಾ ಅವರು, ಪ್ರದೋಷ್ ಜೈಲಿನಲ್ಲಿದ್ದಾಗ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬೇರೊಬ್ಬರ ಹೆಸರಿನಲ್ಲಿ ನಂಬರ್ ನೋಂದಾಯಿಸಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಜೈಲಾಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲೂ ಅಕ್ರಮ ಕರೆ ಮಾಡಿರುವುದು ದೃಢಪಟ್ಟಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಜೈಲಿನಿಂದ ಹೊರಬರಲು ಪ್ರದೋಷ್ ಹಲವರೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಮತ್ತು ಆತನ ಮೇಲೆ ಯಾರಾದರೂ ಒತ್ತಡ ಹೇರಿರುವ ಸಾಧ್ಯತೆಯಿದೆ ಎಂದು ಅವರು ವಾದಿಸಿದರು.
ಈ ಪ್ರಕರಣದ ಸಂಪೂರ್ಣ ತನಿಖೆ ಮುಕ್ತಾಯವಾಗುವವರೆಗೆ ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಬೇಕು ಮತ್ತು ತನಿಖೆ ಪೂರ್ಣಗೊಂಡ ಬಳಿಕವೇ ಈ ಕುರಿತು ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಪ್ರದೋಷ್ ಪರ ವಕೀಲರ ವಾದವೇನು?
ಪ್ರದೋಷ್ ಪರ ವಕೀಲ ದಿವಾಕರ್ ಅವರು ಜೈಲಿನಲ್ಲಿ ನಡೆದಿದೆ ಎನ್ನಲಾದ ಮೊಬೈಲ್ ಬಳಕೆಯ ಘಟನೆ ಸಂಪೂರ್ಣ ಪ್ರತ್ಯೇಕ ಪ್ರಕರಣ ಎಂದು ವಾದಿಸಿದರು.
ಜೈಲು ಮ್ಯಾನುಯಲ್ ಪ್ರಕಾರ ಖೈದಿಗಳಿಗೆ ನಿರ್ದಿಷ್ಟ ಫೋನ್ ನಂಬರ್ಗಳಿಗೆ ಕರೆ ಮಾಡಲು ಅವಕಾಶವಿದೆ. ಅಲ್ಲದೆ, ಹೈಕೋರ್ಟ್ ಈಗಾಗಲೇ ಒಂದು ವಾರದೊಳಗೆ ಆದೇಶ ನೀಡುವಂತೆ ನಿರ್ದೇಶಿಸಿದೆ. ಹೀಗಾಗಿ ದರ್ಶನ್ ಪರ ಸಲ್ಲಿಸಿರುವ ಮೆಮೋಗೆ ಕಾನೂನು ಮಾನ್ಯತೆ ಇಲ್ಲ ಎಂದು ವಾದಿಸಿದರು.
ಆದ್ದರಿಂದ ವಿಚಾರಣೆಯನ್ನು ಮತ್ತಷ್ಟು ವಿಳಂಬ ಮಾಡದೆ ಮಾಫಿ ಸಾಕ್ಷಿಯಾಗುವ ವಿಚಾರದಲ್ಲಿ ಇಂದೇ ಆದೇಶ ಪ್ರಕಟಿಸಬೇಕು ಎಂದು ಪ್ರದೋಷ್ ಪರ ವಕೀಲರು ಮನವಿ ಮಾಡಿದರು.
SPP ಪ್ರಸನ್ನ ಕುಮಾರ್ ವಾದ
ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ದರ್ಶನ್ ಪರ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲು ಅರ್ಹವಲ್ಲ ಮತ್ತು ಇದು ಅಪ್ರಸ್ತುತ ಎಂದು ವಾದಿಸಿದರು.
ಪ್ರದೋಷ್ ತನ್ನ ಮಿತಿಯನ್ನು ಮೀರಿ ಬೇರೊಬ್ಬರ ಹೆಸರಿನಲ್ಲಿ ಮೊಬೈಲ್ ನಂಬರ್ ನೋಂದಾಯಿಸಿ ಮಾತನಾಡಿದ್ದಾನೆ ಎನ್ನಲಾಗಿರುವ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ನೇರ ಸಂಬಂಧವಿಲ್ಲ ಎಂದು SPP ವಾದಿಸಿದರು.
ನ್ಯಾಯಾಧೀಶರ ಮುಂದೆ ಪ್ರದೋಷ್ ಕಣ್ಣೀರು
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಪ್ರದೋಷ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ.
ಜೈಲು ಅಧಿಕಾರಿಗಳೇ ತನಗೆ ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು. ತನ್ನ ಬಳಿ ಯಾವುದೇ ಸಿಸ್ಟಮ್ ಆಕ್ಸೆಸ್ ಇರಲಿಲ್ಲ. ಆರಂಭದಲ್ಲಿ ಕಾನೂನುಬದ್ಧವಾಗಿದೆ ಎಂದು ಹೇಳಿದ್ದ ಅಧಿಕಾರಿಗಳೇ ಇದೀಗ ಅಕ್ರಮ ಎಂದು ಹೇಳುತ್ತಿದ್ದಾರೆ ಎಂದು ಪ್ರದೋಷ್ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಕಳೆದ ಎರಡು-ಮೂರು ದಿನಗಳಿಂದ ತನ್ನನ್ನೇ ಗುರಿಯಾಗಿಸಿಕೊಂಡು ಕ್ಯಾಂಟೀನ್ ವ್ಯವಸ್ಥೆಯನ್ನು ಕಿತ್ತುಕೊಂಡಿದ್ದಾರೆ. ಒಂದು ತಿಂಗಳು ಸೆಲ್ನಲ್ಲಿ ಇರಬೇಕು ಹಾಗೂ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡುವುದಿಲ್ಲ ಎಂದು ಬೆದರಿಸಲಾಗುತ್ತಿದೆ ಎಂದು ಪ್ರದೋಷ್ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದಿನ ಆದೇಶ ಇದೀಗ ಮಹತ್ವ ಪಡೆದುಕೊಂಡಿದೆ.
ಅಪರಾಧ
ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತಿದ್ದ ‘ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಬಂಧನ:
ತುಮಕೂರು: ಪಾವಗಡ ತಾಲೂಕಿನ ಕನಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಳೆದ ಹಲವು ತಿಂಗಳಿಂದ ಆತಂಕ ಮೂಡಿಸಿದ್ದ ಎನ್ನಲಾದ ‘ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ವೆಂಕಟೇಶ್ ಅರೆಬೆತ್ತಲೆಯಾಗಿ ಎಣ್ಣೆ ಹಚ್ಚಿಕೊಂಡು ಚಿಕನ್ ಸೇವಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ನಕ್ಸಲ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಆರೋಪ
ಕನಕಲಬಂಡೆ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ನಕ್ಸಲ್ ಹೆಸರನ್ನು ಬಳಸಿಕೊಂಡು ಗ್ರಾಮಸ್ಥರಿಗೆ ಬೆದರಿಕೆ ಹಾಗೂ ದೌರ್ಜನ್ಯ ನಡೆಸುತ್ತಿದ್ದ ಆರೋಪ ವೆಂಕಟೇಶ್ ವಿರುದ್ಧ ಕೇಳಿಬಂದಿತ್ತು.
ಆಗಸ್ಟ್ 29ರಂದು ರೈತ ಕರಿಯಣ್ಣ ಅವರ ಪಂಪ್ಸೆಟ್ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ವೆಂಕಟೇಶ್ ಹೆಸರು ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ಈತನ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಪೊಲೀಸರ ತಂಡದಿಂದ ಕಾರ್ಯಾಚರಣೆ
ಅಡಿಷನಲ್ ಎಸ್ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪಾವಗಡ ಇನ್ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್ಪೆಕ್ಟರ್ ಕೊಟ್ರೇಶ್, ಎಸ್ಐ ಸುನಿಲ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದು, ನಕ್ಸಲ್ ಹೆಸರಿನಲ್ಲಿ ನಡೆದಿರುವ ಬೆದರಿಕೆ ಪ್ರಕರಣಗಳು ಹಾಗೂ ಇತರ ಅಪರಾಧಗಳಲ್ಲಿ ಆತನ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.ವೆಂಕಟೇಶ್ ಬಂಧನದಿಂದ ಕನಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
-
ಬೆಂಗಳೂರು19 ಗಂಟೆಗಳು agoKSRTC ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ರೆ ದಂಡ; ಆಗಸ್ಟ್ನಲ್ಲಿ 4,862 ಪ್ರಯಾಣಿಕರಿಗೆ ಶಿಕ್ಷೆ
-
ದೇಶ18 ಗಂಟೆಗಳು agoUPI ಬಳಕೆದಾರರಿಗೆ ಗುಡ್ ನ್ಯೂಸ್: ₹2,000ವರೆಗಿನ ಪಾವತಿ ಉಚಿತ; ಹೊಸ ನಿಯಮಗಳೇನು?
-
ದೇಶ21 ಗಂಟೆಗಳು agoGovernment School ಸುಧಾರಣೆಗೆ ರಾಷ್ಟ್ರವ್ಯಾಪಿ ಅಭಿಯಾನ: ಆಗಸ್ಟ್ 15ಕ್ಕೆ ಅಭಿಜಿತ್ ದೀಪ್ಕೆ ಕರೆ
-
ದೇಶ20 ಗಂಟೆಗಳು agoPM Narendra Modi ಆಡಳಿತಕ್ಕೆ ಯದುವೀರ್ ಒಡೆಯರ್ ಮೆಚ್ಚುಗೆ; ಅ.7ರಂದು ಮೈಸೂರಿನಲ್ಲಿ ಸೇವಾ ಸಂಕಲ್ಪ ಸಮಾವೇಶ
-
ದೇಶ20 ಗಂಟೆಗಳು agoShahzad Bhatti Network ಉಗ್ರ ಸಂಘಟನೆ ಎಂದು ಘೋಷಣೆ; UAPA ಪಟ್ಟಿಯಲ್ಲಿ 46ನೇ ಸ್ಥಾನ
-
ಬೆಂಗಳೂರು18 ಗಂಟೆಗಳು agoಫ್ಲೈಓವರ್, ಮೆಟ್ರೋ, ಉಪನಗರ ರೈಲು: Bengaluru ರಿನ ಟ್ರಾಫಿಕ್ಗೆ ಹೊಸ ಮಾಸ್ಟರ್ ಪ್ಲಾನ್
-
ಬೆಂಗಳೂರು19 ಗಂಟೆಗಳು agoAnanth Nag ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; ಕನ್ನಡಿಗರಿಗೆ ಸಂತಸದ ಸುದ್ದಿ
-
ದೇಶ18 ಗಂಟೆಗಳು ago₹2,000 ಮೇಲ್ಪಟ್ಟ UPI ಪಾವತಿಗೆ 0.4% MDR: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
