ದೇಶ
Parliament Attack| ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದು ಫೇಮಸ್ ಆಗಬೇಕೆಂದುಕೊಂಡಿದ್ದ ಆರೋಪಿಗಳು

ನವದೆಹಲಿ: ಸಂಸತ್ ಮೇಲೆ ದಾಳಿ ನಡೆಸಲು (Parliament Security Breach) ಸಂಚು ರೂಪಿಸಿದ್ದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಬಯಸಿದ್ದರು ಎಂಬ ಸ್ಫೋಟಕ ಅಂಶ ಈಗ ಬಯಲಾಗಿದೆ.
ಸಂಸತ್ನಲ್ಲಿ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 1 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ,
ಚಾರ್ಜ್ಶೀಟ್ನಲ್ಲಿ ಏನಿದೆ?
ಭಾರತದ (India) ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಂಬಿದ್ದ ಆರೋಪಿಗಳು ಅದನ್ನು ಬದಲಿಸಬೇಕು ಎನ್ನುವ ಉದ್ದೇಶ ಹೊಂದಿದ್ದರು. 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದು ಅದನ್ನು ಕಾರ್ಯಗತಗೊಳಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ತಮ್ಮ ನಡೆಯನ್ನು ಯೋಜಿಸಿದ್ದರು.
ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಸ್ನೇಹಿತರಾಗಿದ್ದ ಇವರು ಮೈಸೂರು, ಗುರುಗ್ರಾಮ, ದೆಹಲಿ ಸೇರಿ ಐದು ಕಡೆ ಸಭೆ ನಡೆಸಿ ಸಂಸತ್ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು. ಈ ಮೂಲಕ ಶೀಘ್ರದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆಯಲು ಬಯಸಿದ್ದರು.
ಮೈಸೂರಿನ ಮನೋರಂಜನ್ (Mysuru Manoranjan) ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಮೈಸೂರಿನಲ್ಲೇ ಮನೋರಂಜನ್ ನೇತೃತ್ವದಲ್ಲಿ ಮೊದಲ ಸಭೆ ನಡೆದಿತ್ತು. ಮೊದಲ ಸಭೆಯಲ್ಲಿ ಹತ್ತು ಮಂದಿ ಭಾಗಿಯಾಗಿದ್ದರು.
ಸಭೆಯಲ್ಲಿ ಹಿಂಸಾತ್ಮಕ ವಿಡಿಯೋ ತೋರಿಸಿ, ಪ್ರತ್ಯೇಕ ಸಂಘಟನೆ ಹುಟ್ಟುಹಾಕುವ ಯೋಜನೆಯನ್ನು ಮನೋರಂಜನ್ ವಿವರಿಸಿದ್ದ. ಎರಡನೇ ಸಭೆಯನ್ನು ಹರ್ಯಾಣದ ಗುರುಗ್ರಾಮದಲ್ಲಿ ನಡೆಸಲಾಗಿತ್ತು. ಇದರಲ್ಲಿ ಏಳು ಮಂದಿ ಭಾಗಿಯಾಗಿದ್ದರು. ಕಾನೂನು ಉಲ್ಲಂಘನೆಯಾಗುವ ಭೀತಿಯಲ್ಲಿ ಮೊದಲ ಸಭೆಯಲ್ಲಿದ್ದ ಮೂವರು ಎರಡನೇ ಸಭೆಗೆ ಗೈರಾಗಿದ್ದರು.
ತಂಡಕ್ಕೆ ಮಹಿಳೆಯರನ್ನು ಸೇರಿಕೊಳ್ಳುವ ಉದ್ದೇಶದಿಂದ ನೀಲಂಳನ್ನು ಸೇರಿಸಿಕೊಳ್ಳಲಾಗಿತ್ತು. ಬಳಿಕ ದೆಹಲಿಯಲ್ಲಿ ಮೂರನೇ ಸಭೆ ನಡೆಸಿದ್ದರು. ಕಡೆಯದಾಗಿ ಇಂಡಿಯಾ ಗೇಟ್ ಬಳಿ ಸೇರಿ ಅಲ್ಲಿಂದ ಸ್ಮೋಗ್ ಕ್ಯಾನ್ ಬಳಸಿ ದಾಳಿ ಮಾಡಲು ಸಂಸತ್ ಗೆ ತೆರಳಿದ್ದರು.