ದೇಶ

ವಾರದ ಅಂತರದಲ್ಲಿ 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ Ratna Bhandar

ಪುರಿ: ವಾರದ ಹಿಂದಷ್ಟೇ ತೆರೆದಿದ್ದ ಪುರಿ ಜಗನ್ನಾಥ ದೇಗುಲದ Ratna Bhandarವನ್ನು ಪುನಃ ಗುರುವಾರ ತೆರೆಯಲಾಗಿದೆ.

ಹೌದು..12ನೇ ಶತಮಾನದ ಪುರಿ ಜಗನ್ನಾಥ ದೇವಾಲಯದ ಖಜಾನೆಯಾದ ರತ್ನ ಭಂಡಾರವನ್ನು ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ತೆರೆಯಲಾಗಿದೆ. ಅಲ್ಲಿನ ದುರಸ್ತಿಕಾರ್ಯ ಮತ್ತು ಆಭರಣಗಳ ಲೆಕ್ಕಹಾಕುವ ಪ್ರಕ್ರಿಯೆಗಾಗಿ ಅವುಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಸ್ಥಳಾಂತರಿಸಲು ಗುರುವಾರ ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 9.51ಕ್ಕೆ ಖಜಾನೆಯನ್ನು ಮತ್ತೆ ತೆರೆಯಲಾಯಿತು. ಭಗವಾನ್ ಜಗನ್ನಾಥ ಮತ್ತು ಅವರ ಒಡಹುಟ್ಟಿದವರ ಮುಂದೆ ಪ್ರಾರ್ಥನೆ ಸಲ್ಲಿಸಿದ ನಂತರ, ಒಡಿಶಾ ಸರ್ಕಾರವು ರತ್ನ ಭಂಡಾರದಿಂದ ಬೆಲೆಬಾಳುವ ವಸ್ತುಗಳನ್ನು ಸ್ಥಳಾಂತರಿಸಲು ಸ್ಥಾಪಿಸಿದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಬೆಳಿಗ್ಗೆ 9 ಗಂಟೆಗೆ ದೇವಾಲಯವನ್ನು ಪ್ರವೇಶಿಸಿದರು ಎಂದು ಮಾಹಿತಿ ನೀಡಿದರು.

ದೇವಸ್ಥಾನ ಪ್ರವೇಶಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಮತ್ತು ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್, “ಭಂಡಾರದ ಒಳಕೋಣೆಯೊಳಗೆ ಸಂಗ್ರಹವಾಗಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸ್ಥಳಾಂತರವನ್ನು ಸುಗಮವಾಗಿ ಪೂರ್ಣಗೊಳಿಸಲು ನಾವು ಜಗನ್ನಾಥನ ಆಶೀರ್ವಾದವನ್ನು ಕೋರಿದ್ದೇವೆ” ಎಂದು ಹೇಳಿದರು.

ಕಳೆದ ಬಾರಿ 46 ವರ್ಷಗಳ ಬಳಿಕ ಜುಲೈ 14ರಂದು ಖಜಾನೆ ತೆರೆಯಲಾಗಿತ್ತು. ಅಂದು ರತ್ನಾ ಭಂಡಾರದ ಹೊರ ಕೊಠಡಿಯ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲಾಗಿತ್ತು. ಇಂದು ಅದರ ಮುಂದುವರೆದ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Trending

Exit mobile version